ಮಕ್ಕಳ ಬದುಕಿಗೆ ನಾವು ಮಾದರಿಯಾಗಬೇಕೆ ಹೊರತು ಮುಳ್ಳಾಗಬಾರದು
ರತ್ನಾಪುರ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ರಂಗಪ್ಪ ಎಂಬ ಬಡ ರೈತನಿದ್ದನು. ದಿನಾಲೂ ಹೊಲದಲ್ಲಿ ಕೆಲಸ ಮಾಡೋದು ರಾತ್ರಿ ಮಾತ್ರ ಮನೆಗೆ ಕುಡಿದು ಬರೋದು, ಕುಡಿದ ಮತ್ತಿನಲ್ಲಿ ಮನೆಯಲ್ಲಿ ಹೆಂಡತಿಯೊಂದಿಗೆ ದಿನಾಲೂ ಜಗಳವಾಡುತ್ತಿದ್ದ. ಕಾರಣವಿಲ್ಲದೆ ಜಗಳ, ಹೊಡೆಯುವುದು, ಕಿರುಕುಳ ಕೊಡುವುದು ಮಾಡುತ್ತಿದ್ದ. ಆ ರೈತನಿಗೆ ಇಬ್ಬರೂ ಹೆಣ್ಣುಮಕ್ಕಳಿದ್ದರೂ. ಆ ಮಕ್ಕಳ ಸಲುವಾಗಿ ಅವನ ಹೆಂಡತಿ ಅವನೇಷ್ಟೇ ಕಾಟ ಕೊಟ್ಟರು ಅದನ್ನ ಸಹಿಸಿಕೊಂಡು ಜೀವನ ನಡೆಸುತ್ತಿದ್ದಳು. ಹೀಗೆ ಕೆಲವು ದಿನಗಳ ನಂತರ ಅವರ ಮೊದಲ ಮಗಳ ಮದುವೆಯನ್ನು ಅದಾದ 2-3 ವರ್ಷಗಳ ನಂತರ ಎರಡನೇ ಮಗಳ ಮದುವೆಯನ್ನು ಮಾಡಿ ಮುಗಿಸುತ್ತಾರೆ. ಮಕ್ಕಳು ಗಂಡನ ಮನೆಯಲ್ಲಿ ಸುಖವಾಗಿರುತ್ತಾರೆ ಆದರೆ ಇಲ್ಲಿ ರಂಗಪ್ಪ ಹೆಣ್ಣುಮಕ್ಕಳ ಮದುವೆಗೆ ಮಾಡಿದ್ದ ಸಾಲದ ಚಿಂತೆಯಲ್ಲಿ ಮತ್ತೇ ದಿನಾಲೂ ಕುಡಿದು ಬಂದು ರಂಪಾಟ ಮಾಡುತ್ತಿರುತ್ತಾನೆ. ಹೀಗೆ ಕೆಲವು ತಿಂಗಳುಗಳ ನಂತರ ಮೊದಲ ಮಗಳ ಮನೆಯಲ್ಲಿ ಜಗಳ ಶುರುವಾಗುತ್ತದೆ. ಅಳಿಯನು ಮಾವನ ತರಹ ಕುಡಿದು ಬಂದು ಹೆಂಡತಿಗೆ ಕಿರುಕುಳ ಕೊಡಲು ಶುರುವಿಟ್ಟುಕೊಳ್ಳುತ್ತಾನೆ. ಅದನ್ನ ಸಹಿಸಲಾಗದೇ ಮೊದಲ ಮಗಳು ಅಪ್ಪನ ಬಳಿ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ರಂಗಪ್ಪ ಸಿಟ್ಟಿಗೆದ್ದು , ಮಗಳ ಮೇಲಿನ ಪ್ರೀತಿಯಿಂದಾಗಿ ಕೂಡಲೇ ಅವರ ಮನೆಗೆ ಹೋಗಿ ಅಳಿಯನಿಗೆ ಜೋರು ಮಾಡಿ “ ಹೀಗೇಕೆ ನನ್ನ ಮಗಳಿಗೆ ಹಿಂಸೆ ಮಾಡ್ತಾ ಇದ್ದೀಯಾ ಏನಾಗಿದೆ ನಿನಗೆ” ಅಂತ ಕೇಳ್ತಾನೆ. ಆಗ ಅವನು “ನನ್ನಿಷ್ಟ ಅವಳು ನನ್ನ ಹೆಂಡತಿ ನಾನು ಏನು ಬೇಕಾದರೂ ಮಾಡ್ತಿನಿ”ಅಂತ ಎದುರುತ್ತರ ಕೊಡ್ತಾನೆ. ರಂಗಪ್ಪನಿಗೆ ಸಿಟ್ಟು ತಾಳಲಾರದೇ “ ಅವಳು ನನ್ನ ಮಗಳು ಕಣೋ, ಈ ತರಹ ಹಿಂಸೆ ಕೊಟ್ರೆ ನಾನ್ ನಿನ್ನ ಸುಮ್ನೆ ಬಿಡಲ್ಲ” ಅಂತ ಅವನ ಮೇಲೆ ಕೈ ಮಾಡಲು ಹೋಗುತ್ತಾನೆ, ಆಗ ಕೈ ಮಾಡಲು ಹೋದ ರಂಗಪ್ಪನ ಕೈಯನ್ನು ತಡೆದು ಅವನ ಅಳಿಯ “ ಮೊದಲು ನೀವ್ ಸರಿ ಇದ್ದೀರಾ ಅಂತ ನೋಡ್ಕೊಳ್ಳಿ ಆಮೇಲೆ ನನಗೇಳುವಿರಂತೆ , ಬಂದ್ಬಿಟ್ರು ಇಲ್ಲಿ ನಂಗೆಳೊಕ್ಕೆ” ಅಂತ ಸ್ವಲ್ಪ ಒರಟಾಗಿ ಬಾಯಿ ತಪ್ಪಿ ಅಂದುಬಿಡುತ್ತಾನೆ. ಈ ಮಾತುಗಳು ರಂಗಪ್ಪನ ಎದೆಗೆ ಬಾಣ ಬಿಟ್ಟ ಹಾಗಾಗುತ್ತೆ, ಒಂದು ಕ್ಷಣ ಅವನು ಗಾಬರಿಯಾಗಿ ಯೋಚನೆ ಮಾಡ್ತಾನೆ ಇವತ್ತು ನನ್ನ ಮಗಳು ಅನುಭವಿಸುತ್ತಿರುವ ನೋವನ್ನ ನಾನು ನನ್ನ ಹೆಂಡತಿಗೆ ನೀಡಿದ್ದೆನಲ್ಲ ಎಂಥಹ ಕಟುಕ ನಾನು ಎಂದು ಪರಿತಪಿಸುತ್ತಾನೆ. ನಾನು ಸರಿಯಿದ್ದಿದ್ದರೆ ಇಂದು ನಾನು ಅಳಿಯನಿಂದ ಈ ಮಾತುಗಳನ್ನ ಕೇಳಬೇಕಾಗಿ ಬರುತ್ತಿರಲಿಲ್ಲ, ನನ್ನ ಮಗಳಿಗೆ ಇಂಥಹ ಪರಿಸ್ಥಿತಿ ಬರ್ತಾ ಇರ್ಲಿಲ್ಲ, ನಾನು ಮಾಡಿದ ತಪ್ಪು ನನ್ನ ಮಗಳ ಬಾಳಿಗೆ ಮುಳ್ಳಾಯಿತಲ್ಲ ಎಂದೂ ಕೊರಗಿ ಇನ್ನು ಮುಂದೆ ನಾನು ಕುಡಿಯುವುದಿಲ್ಲ ಎಂದು ಮಗಳು ಮತ್ತು ಅಳಿಯನೆದುರು ಪ್ರಮಾಣ ಮಾಡುತ್ತಾನೆ. ಅಳಿಯನಿಗೆ ಸಮಾಧಾನದಿಂದ ತಿಳಿಹೇಳಿ, ಮಗಳಿಗೂ ಧೈರ್ಯ ಹೇಳಿ ಮನೆಗೆ ಬರುತ್ತಾನೆ. ಮನೆಗೆ ಬಂದ ತಕ್ಷಣವೇ ತನ್ನ ಹೆಂಡತಿಯ ಬಳಿ ತಾನು ಮಾಡಿದ ತಪ್ಪುಗಳಿಗೆಲ್ಲ ಕ್ಷಮೆ ಯಾಚಿಸುತ್ತಾನೆ. ಕುಡಿತ ಬಿಟ್ಟ ಮೇಲೆ ಅವನ ಬಾಳು ಸಂತೋಷದಿಂದ ಸಾಗುತ್ತದೆ . ಆ ಕಡೆ ಅಳಿಯನು ಬದಲಾಗಿ ನೆಮ್ಮದಿಯಿಂದ ಜೀವನವನ್ನ ಸಾಗಿಸುತ್ತಾರೆ.
ನೀತಿ:- ಮುಂದಿನ ಪೀಳಿಗೆ ನಮ್ಮನ್ನ ಅನುಸರಿಸುತ್ತಿರುತ್ತದೆ. ಹಾಗಾಗಿ ನಾವು ಯಾವ ಮಾರ್ಗದಲ್ಲಿ ಸಾಗಬೇಕೆಂಬುದು ನಮಗೆ ತಿಳಿದಿರಬೇಕು.
✍️ತ್ರಿತಾಶ
Comments
Post a Comment